ಶ್ರೀಮಂತ ಯಾರು ಎಂದಕೂಡಲೇ ನಾವೆಲ್ಲ ಹಣವಿದ್ದವನು ಎನ್ನುತ್ತೇವೆ. ಆದರೆ ನಮ್ಮ ರೈತನೇ ಎಲ್ಲರಿಗಿಂತ ಶ್ರೀಮಂತ ಎಂದು ಈ ಚಿತ್ರದ ಮೂಲಕ ನಿರ್ದೇಶಕ ಹಾಸನ್ ರಮೇಶ್ ನಿರೂಪಿಸಿದ್ದಾರೆ. ರೈತ ಯಾರನ್ನೂ ಅವಲಂಬಿಸಿದವನಲ್ಲ. ಭೂಮಿ ತಾಯಿಯನ್ನು ಮಾತ್ರ ನಂಬಿದವನು. ಕಾಲ ಕಾಲಕ್ಕೆ ಸಮೃದ್ದಿಯಾಗಿ ಮಳೆ ಬಂದರೆ, ಬೆಳೆ ಬೆಳೆದು ದೇಶಕ್ಕೆಲ್ಲ ಅನ್ನ ನೀಡುತ್ತಾನೆ. ಹೀಗೆ ಸರ್ವರಿಗೂ ಆಹಾರ ಬೆಳೆದು ಕೊಡುವ ರೈತನ ಬದುಕು ಜೀವನ ಸದಾ ಶ್ರೀಮಂತವಾಗಿರುತ್ತೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.
ಹಾಸನ ಜಿಲ್ಲೆ ಕೊಪ್ಪಲು ಗ್ರಾಮದ ರೈತರನ್ನು ಹಿನ್ನೆಲೆಯಾಗಿಟ್ಟುಕೊಂಡು, ಗ್ರಾಮೀಣ ಪರಿಸರದಲ್ಲಿ ಆ ರೈತರ ಜೀವನ, ಆತನ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯಗಳನ್ನು ಅನಾವರಣಗೊಳಿಸುವ ಚಿತ್ರವಿದು. ಕಿಚ್ಚ ಸುದೀಪ್ ಅವರ ಧ್ವನಿಯ ಮೂಲಕ ಗ್ರಾಮೀಣ ಪರಿಸರದ ಸೌಂದರ್ಯವನ್ನು ಬಣ್ಣಿಸುತ್ತ ಆರಂಭವಾಗುವ ಚಿತ್ರ ಮುಂದೆ ಹಲವಾರು ತಿರುವುಗಳನ್ನು ಪಡೆಯುತ್ತ ಸಾಗುತ್ತದೆ. ಅನಾದಿ ಕಾಲದಿಂದಲೂ ರೈತ ನಂಬಿಕೊಂಡು ಬಂದಿರುವುದು ಮಳೆಯನ್ನು. ಮಳೆ ಬಂದರೆ ಬೆಳೆ , ಬದುಕು ಎಲ್ಲವೂ ಚೆನ್ನ. ಒಮ್ಮೆ ಐದಾರು ವರ್ಷ ಮಳೆ ಬಾರದೆ ಊರಿನ ಜನರೇ ಕಂಗಾಲಾಗುತ್ತಾರೆ. ಮಳೆರಾಯನ ಕೃಪೆಗಾಗಿ
ಗ್ರಾಮದ ಜನ ಪೂಜೆಯನ್ನ ಮಾಡುತ್ತಾರೆ. ಇದರ ಉಸ್ತುವಾರಿಯನ್ನು ನಾಯಕ ಕೃಷ್ಣ (ಕ್ರಾಂತಿ) ವಹಿಸಿಕೊಳ್ಳುತ್ತಾನೆ. ಕೃಷ್ಣನನ್ನ ಸದಾ ಪ್ರೀತಿಸುವ ಪಟೇಲನ (ಚರಣ್ ರಾಜ್) ಮಗಳು ಪದ್ಮ (ವೈಷ್ಣವಿ ಮೆನನ್)ಕೂಡ ಮಳೆಗಾಗಿ ದೇವಿಯ ಮೊರೆ ಹೋಗುತ್ತಾಳೆ. ದೇವರ ಅನುಗ್ರಹದಿಂದ ಮಳೆ ಬಂದು ಜನ ನೆಮ್ಮದಿಯ ನಿಟ್ಟಿಸಿರುಬಿಡುತ್ತಾರೆ.
ಇದರ ನಡುವೆ ಸಮೃದ್ಧ ಬೆಳೆಯನ್ನ ಬೆಳೆದಿರುವ ರೈತರು, ನಿಂತುಹೋಗಿದ್ದ ಊರ ದೇವಿಯ ಹಬ್ಬವನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸುತ್ತಾರೆ. ಜಾತ್ರೆ ಅಂದ್ರೆ ಮನರಂಜನೆ ಬೇಕಲ್ಲ, ಎಲ್ಲ ಸೇರಿ ಒಂದು ನಾಟಕ ಮಾಡಲು ಮುಂದಾಗುತ್ತಾರೆ. ಹಬ್ಬಕ್ಕಾಗಿ ತಯಾರಿ , ನಾಟಕಕ್ಕಾಗಿ ಸಿದ್ಧತೆಗಳ ನಡುವೆ ಯಾರು ಯಾವ ಪಾತ್ರಕ್ಕೆ ಸೂಕ್ತ ಎಂಬುದಕ್ಕೆ ಮೇಷ್ಟ್ರು (ರಮೇಶ್ ಭಟ್) ಆಗಮನ. ಅವರ ಶಿಷ್ಯ (ರಾಜು ತಾಳಿಕೋಟೆ) ಸಾತ್. ಪಾತ್ರಗಳ ಆಯ್ಕೆ ಗಲಾಟೆಯ ನಡುವೆ ರಾಜಕೀಯ ಮುಖಂಡ (ರವಿಶಂಕರ್ ಗೌಡ) ಕೃಷ್ಣನ ಪಾತ್ರಕ್ಕೆ ಆಯ್ಕೆ. ಅಭಿಮನ್ಯು ಪಾತ್ರಕ್ಕೆ ಕೃಷ್ಣ ಆಯ್ಕೆಯಾಗುತ್ತಾನೆ. ಸ್ತ್ರೀ ಪಾತ್ರಕ್ಕಾಗಿ ಮುಂಬೈನಿಂದ ರುಚಿ (ವೈಷ್ಣವಿ ಪಟುವರ್ಧನ್) ಯನ್ನು ಕರೆಸಿಕೊಳ್ಳುತ್ತಾರೆ. ನಾಟಕದ ಪ್ರಾಕ್ಟೀಸ್ ನಡುವೆ ಕೃಷ್ಣ ಹಾಗೂ ರುಚಿಯ ಮಧ್ಯೆ ಆಕರ್ಷಣೆ ಉಂಟಾಗುತ್ತದೆ. ಮತ್ತೊಂದು ಟ್ವಿಸ್ಟ್ ಪಡೆದುಕೊಳ್ಳುತ್ಹಲವು ಏರಿಳಿತಗಳ ನಡುವೆ ಸಾಗುವ ಪಯಣದ ಕೊನೆಯಲ್ಲಿ ನಟ ಸೋನು ಸೂದ್ ಹೇಳುವ ವಿಚಾರ ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಒಮ್ಮೆ ನೀವು ಶ್ರೀಮಂತ ಚಿತ್ರವನ್ನು ನೋಡಬೇಕು.
ಇಡೀ ಚಿತ್ರದ ಹೈಲೈಟ್ ಅಂದ್ರೆ ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ. ಅರ್ಥಪೂರ್ಣ ಸಾಹಿತ್ಯದ ನಡುವೆ ಮಧುರವಾದ ಸಂಗೀತ ಬೆಸೆದಿದೆ. ಇನ್ನು ನಿರ್ದೇಶಕ ಹಾಸನ ರಮೇಶ್ ಹಳ್ಳಿ ಸೊಗಡಿನ ಬದುಕು , ಬವಣೆಯನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಡುವುದರಲ್ಲಿ ಗೆದ್ದಿದ್ದಾರೆ. ನಿಜವಾದ ಶ್ರೀಮಂತ ಯಾರೆಂಬ ಪ್ರಶ್ನೆಗೆ ಉತ್ತರ ನೀಡುವುದರ ಜೊತೆಗೆ ರೈತ ಎಷ್ಟು ಮುಖ್ಯ , ಯುವಕರ ಮನಸ್ಥಿತಿ ಎತ್ತ ಗಮನಹರಿಸಬೇಕು ಎಂಬುದನ್ನು ಹೇಳಿದ್ದಾರೆ. ಆದರೆ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು , ಇನ್ನಷ್ಟು ವೇಗವಾಗಿ ಚಿತ್ರ ಸಾಗಿದ್ದರೆ ಚೆನ್ನಾಗಿರುತ್ತಿತ್ತು. ಒಂದು ಉತ್ತಮ ಪ್ರಯತ್ನಕ್ಕೆ ಎಲ್ಲರ ಸಾತ್ ನೀಡಿದ್ದು , ಕೆ.ಎಂ. ವಿಷ್ಣುವರ್ಧನ್ , ರವಿಕುಮಾರ್ ಸನಾ ಅವರ ಕ್ಯಾಮೆರಾ ಕೈಚಳಕ ಸೊಗಸಾಗಿ ಮೂಡಿ ಬಂದಿದೆ.
ಇನ್ನು ಚಿತ್ರದ ನಾಯಕನಾಗಿ ಅಭಿನಯಿಸಿರುವ ಕ್ರಾಂತಿ ಗಮನ ಸೆಳೆಯುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿಯಾಗಿ ಅಭಿನಯಿಸಿರುವ ವೈಷ್ಣವಿ ಮೆನ್್್ನ್ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಮತ್ತೊಬ್ಬ ನಾಯಕಿ ವೈಷ್ಣವಿ ಚಂದ್ರನ್ ಮೆನನ್ ನೋಡಲು ಮುದ್ದು ಮುದ್ದಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ. ಅದೇ ರೀತಿ ಹಿರಿಯ ನಟ ಚರಣ್ ರಾಜ್ ಕೂಡ ಪಟೇಲ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದು , ನಾಯಕನ ತಾಯಿಯ ಪಾತ್ರದಲ್ಲಿ ಕಲ್ಯಾಣಿ ಹಳ್ಳಿ ಸೊಗಡಿನ ಭಾಷೆಯನ್ನು ಖದರ್ ಆಗಿ ನಿರ್ವಹಿಸಿದ್ದಾರೆ. ಗೆಳೆಯರಾಗಿ ಕುರಿರಂಗ , ಗಿರಿ ಸೇರಿದಂತೆ ಉಳಿದವರು ಸಾತ್ ನೀಡಿದ್ದಾರೆ. ಸಂಗೀತ ಮೇಷ್ಟ್ರಾಗಿ ರಮೇಶ್ ಭಟ್ , ಶಿಷ್ಯನಾಗಿ ರಾಜು ತಾಳಿಕೋಟೆ ತಮ್ಮ ತಮ್ಮ ಪಾತ್ರ ಪೋಷಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರವಿಶಂಕರ್ ಗೌಡ , ವಿಶೇಷವಾಗಿ ಬರುವ ಸಾಧುಕೋಕಿಲ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇನ್ನು ಈ ಚಿತ್ರದ ವಿಶೇಷ ಪಾತ್ರದಲ್ಲಿ ಬರುವ ಸೋನು ಸೂದ್ ಚಿತ್ರದ ತಿರುವಿಗೆ ಹೊಸ ನಾಂದಿ ಹಾಡುತ್ತಾ ಅವರು ಹೇಳುವ ವಿಚಾರ ಎಲ್ಲರ ಮೆಚ್ಚುಗೆಯನ್ನು ಪಡೆಯುವಂತಿದೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಈ ಶ್ರೀಮಂತ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.